ಕಾವೇರಿ ವಿವಾದ: ರೈತರ ಬೆನ್ನಿಗೆ ನಿಂತ ಸ್ಯಾಂಡಲ್‌ವುಡ್; ವೈಜ್ಞಾನಿಕ ಸಮೀಕ್ಷೆಗೆ ಸಾ ರಾ ಗೋವಿಂದು, ಜಯಮಾಲಾ, ರಾಕ್‌ಲೈನ್ ಆಗ್ರಹ!

ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಇತ್ತೀಚಿನ ನೀರು ಬಿಡುಗಡೆ ಆದೇಶದ ವಿರುದ್ಧ ಕರ್ನಾಟಕದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಕನ್ನಡ ಚಿತ್ರರಂಗವು ಮತ್ತೊಮ್ಮೆ ನಾಡಿನ ರೈತರ ಪರವಾಗಿ ಧ್ವನಿ ಎತ್ತಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಅಧ್ಯಕ್ಷೆ ಜಯಮಾಲಾ, ಹಿರಿಯ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹಾಗೂ ಮಾಜಿ ಅಧ್ಯಕ್ಷ ಸಾ ರಾ ಗೋವಿಂದು ನೇತೃತ್ವದಲ್ಲಿ ಚಿತ್ರರಂಗದ ಪ್ರಮುಖರು ಸಭೆ ನಡೆಸಿ, ಕಾವೇರಿ ಹೋರಾಟದಲ್ಲಿ ರೈತರ ಜೊತೆ ದೃಢವಾಗಿ ನಿಲ್ಲುವುದಾಗಿ ಘೋಷಿಸಿದ್ದಾರೆ.

ನಮ್ಮ ನೆಲ, ಜಲವೇ ಮೊದಲು: ಡಾ. ಜಯಮಾಲಾ

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷೆ, ಹಿರಿಯ ನಟಿ ಜಯಮಾಲಾ, “ಕನ್ನಡ ಚಿತ್ರರಂಗವು ಎಂದಿಗೂ ನಾಡಿನ ನೆಲ, ಜಲ ಮತ್ತು ಭಾಷೆಯ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಹಿಂದೆ ಮಹದಾಯಿ ಮತ್ತು ಕಳಸಾ-ಬಂಡೂರಿ ಚಳವಳಿಯಲ್ಲೂ ಚಿತ್ರರಂಗ ಸಕ್ರಿಯವಾಗಿ ಭಾಗವಹಿಸಿತ್ತು. ನಮಗೆ ನಮ್ಮ ಭಾಷೆ, ನೆಲ, ಜಲ ಹಾಗೂ ಜನರೇ ಮೊದಲ ಆದ್ಯತೆ. ರೈತರಿಗೆ ತೊಂದರೆಯಾದಾಗಲೆಲ್ಲ ಸ್ಯಾಂಡಲ್‌ವುಡ್ ಅವರ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತದೆ,” ಎಂದು ಸ್ಪಷ್ಟಪಡಿಸಿದರು.

ದೆಹಲಿಯಿಂದ ತಜ್ಞರ ತಂಡ ಕಳುಹಿಸಲು ಸಾ ರಾ ಗೋವಿಂದು ಆಗ್ರಹ

ಪ್ರಾಧಿಕಾರದ ಆದೇಶವನ್ನು ತೀವ್ರವಾಗಿ ಖಂಡಿಸಿದ ಕನ್ನಡ ಒಕ್ಕೂಟದ ಮುಖಂಡ ಹಾಗೂ ಮಾಜಿ ಅಧ್ಯಕ್ಷ ಸಾ ರಾ ಗೋವಿಂದು, “ಕಳೆದ ಎರಡು ತಿಂಗಳುಗಳಿಂದ ಕರ್ನಾಟಕದ ಜಲಾಶಯಗಳ ಜಲಾನಯನ ಪ್ರದೇಶಗಳಲ್ಲಿ ಸರಿಯಾಗಿ ಮಳೆಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನೀರು ಬಿಡುವಂತೆ ಆದೇಶಿಸುವುದು ಸಂಪೂರ್ಣ ಅಸ ವೈಜ್ಞಾನಿಕ,” ಎಂದು ಕಿಡಿಕಾರಿದರು. ತಕ್ಷಣವೇ ಕೇಂದ್ರ ಸರ್ಕಾರವು ದೆಹಲಿಯಿಂದ ತಜ್ಞರ ತಂಡವನ್ನು ಕಳುಹಿಸಿ ಕರ್ನಾಟಕದ ಡ್ಯಾಂಗಳಲ್ಲಿರುವ ನೀರಿನ ನೈಜ ಸ್ಥಿತಿಗತಿಯನ್ನು ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದರು.

ಡಾ. ರಾಜ್, ಅಂಬರೀಶ್ ಹಾದಿಯಲ್ಲಿ ನಾವಿದ್ದೇವೆ: ರಾಕ್‌ಲೈನ್ ವೆಂಕಟೇಶ್

ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮಾತನಾಡಿ, “ವಾಣಿಜ್ಯ ಮಂಡಳಿ ಮತ್ತು ಕಲಾವಿದರ ಸಂಘ ಸೇರಿದಂತೆ ಚಿತ್ರರಂಗದ ಎಲ್ಲಾ ಒಕ್ಕೂಟಗಳು ಒಂದಾಗಿವೆ. ಕೆಎಫ್‌ಸಿಸಿ (KFCC) ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಎಲ್ಲಾ ನಟ-ನಟಿಯರು ಮತ್ತು ತಾಂತ್ರಿಕ ವರ್ಗ ಸಂಪೂರ್ಣ ಬೆಂಬಲ ನೀಡಲಿದ್ದಾರೆ. ಡಾ. ರಾಜ್‌ಕುಮಾರ್ ಅವರು ತೋರಿದ ಹಾದಿ ಹಾಗೂ ಕಾವೇರಿ ವಿಷಯಕ್ಕಾಗಿ ಕೇಂದ್ರ ಸಚಿವ ಸ್ಥಾನಕ್ಕೇ ರಾಜೀನಾಮೆ ನೀಡಿದ್ದ ರೆಬೆಲ್ ಸ್ಟಾರ್ ಅಂಬರೀಶ್ ಅವರ ಆದರ್ಶಗಳನ್ನು ನಾವು ಎಂದಿಗೂ ಮರೆಯುವುದಿಲ್ಲ,” ಎಂದರು.

Leave a Reply

Your email address will not be published. Required fields are marked *